ವರದಿ/ ಚಿತ್ರ: ಈ ಮೀಡಿಯಾ
ಕಾಪು : ಕಾಪು ಪುರಸಭಾ ಕಚೇರಿಗೆ ಸೋಮಮವಾರ ಮದ್ಯಾಹ್ನ ಉಡುಪಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ವಿವಿಧ ವಿಭಾಗಗಳ ಕಡತಗಳು ಹಾಗೂ ಕಚೇರಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ಅಬ್ದುಲ್ ಜಲಾಲ್, ಸುದೀಪ್ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿಯ ತಂಡ ಕಾಪು ಪುರಸಭೆಯಲ್ಲಿ ಕಾರ್ಯಾಚರಣೆ ನಡೆಸಿದೆ.
ಪೌರಕಾರ್ಮಿಕರಿಗೆ ನೀಡಲಾಗುವ ಸುರಕ್ಷತಾ ಸಾಮಗ್ರಿಗಳ ಖರೀದಿ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು, ಪೌರ ಕಾರ್ಮಿಕರಿಂ ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಯಾಚರಣೆ ವೇಳೆ ಪುರಸಭೆಯ ಕಂದಾಯ, ಆರೋಗ್ಯ, ಇಂಜಿನಿಯರಿಂಗ್, ಆಡಳಿತ, ತ್ಯಾಜ್ಯ ವಿಲೇವಾರಿ, ಟ್ರೇಡ್ ಲೈಸೆನ್ಸ್ ಹಾಗೂ ಪೌರಕಾರ್ಮಿಕರ ಸೌಲಭ್ಯಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಯಿತು.
ವಿವಿಧ ವಿಭಾಗಗಳಲ್ಲಿ ಸ್ವೀಕೃತ, ವಿಲೇವಾರಿ, ತಿರಸ್ಕೃತ ಹಾಗೂ ಬಾಕಿ ಇರುವ ಕಡತಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳು ಪಡೆದುಕೊಂಡರು. ಪೌರಕಾರ್ಮಿಕರ ಬಳಕೆಗಾಗಿ ಶೂ, ಕೈಗವಸು ಹಾಗೂ ಮಾಸ್ಕ್ ಗಳನ್ನು ಅಧಿಕ ಬೆಲೆಯಲ್ಲಿ ಖರೀದಿಸಿರುವ ಆರೋಪದ ಕುರಿತು ಸಂಬಂದಪಟ್ಟ ಆರೋಗ್ಯ ನಿರೀಕ್ಷಕರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿ, ಖರೀದಿ ಪ್ರಕ್ರಿಯೆ ಮತ್ತು ದರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದರು.
ವಿವಿಧ ವಿಭಾಗಗಳ ಕಡತಗಳ ಪರಿಶೀಲನೆ ಹಾಗೂ ಪೌರಕಾರ್ಮಿಕರ ಸುರಕ್ಷತಾ ಸಾಮಗ್ರಿಗಳ ಖರೀದಿ ಕುರಿತು ನಡೆದ ವಿಚಾರಣೆಯಿಂದ ಕಾಪು ಪುರಸಭೆ ಕಚೇರಿ ವಲಯದಲ್ಲಿ ಕೆಲಕಾಲ ಸಂಚಲನ ಮೂಡಿತು. ಲೋಕಾಯುಕ್ತ ಪರಿಶೀಲನೆಯ ಬಳಿಕ ಈ ಸಂಬಂಧ ಮುಂದಿನ ಕ್ರಮ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
