ವರದಿ/ ಚಿತ್ರ: ಈ ಮೀಡಿಯಾ
ಉಚ್ಚಿಲ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ಕಂದಾಯ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರೌಢ ಶಾಲೆಗಳು, ಪ.ಪೂ.ಕಾಲೇಜು ವಿಭಾಗದಲ್ಲಿ 2025-26 ಸಾಲಿನಲ್ಲಿ ಜರುಗಿದ ರಾಜ್ಯಮಟ್ಟದ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ಪಾಠದಲ್ಲಿ ಪೂರ್ಣ ಅಂಕಗಳನ್ನು ಗಳಿಸಿದ ಮತ್ತು ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ಶನಿವಾರ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರಗಿತು.
ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ನಾಡು, ನುಡಿ, ಸಂಸ್ಕೃತಿ ಉಳಿಸಲು ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಧಾರ್ಮಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರತಿಸಿಕೊಳ್ಳುವಲ್ಲಿ ಕರಾವಳಿ ಜನರ ಆತಿಥ್ಯದ ಗುಣವೇ ಕಾರ್ಣವಾಗಿದೆ. ಇಂತಹ ಸಾಧನೆಗಳೇ ಸಾಹಿತ್ಯ ಪರಿಷತ್ತಿನ ಯಶಸ್ವಿ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದೆ. ಕಾಪು ತಾಲೂಕು ಘಟಕ ಸಾಹಿತ್ಯ ಚಟುವಟಿಕೆಗಳಲ್ಲಿ ವೈಶಿಷ್ಟö್ಯಪೂರ್ಣ ಕಾರ್ಯಕ್ರಮಗಳೊಂದಿಗೆ ತನ್ನ ಛಾಪನ್ನು ಮೂಡಿಸಿದೆ ಎಂದರು.
ಕಾರ್ಯಕ್ರಮವನ್ನು ದ.ಕ ಮೊಗವೀರ ಹಿತಸಾಧನಾ ವೇದಿಕೆ ಉಚ್ಚಿಲ ಇದರ ಅಧ್ಯಕ್ಷ ಸತೀಶ್ ಆರ್. ಸಾಲಿಯಾನ್ ಇವರು ಉದ್ಘಾಟಿಸಿ ಮಾತನಾಡುತ್ತಾ, ಪ್ರತೀಯೊಬ್ಬರಲ್ಲೂ ಭಾಷಾಭಿಮಾನ ಮೂಡಿಸುವುದು ಅತ್ಯಗತ್ಯವಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಾವೇ ಕೈಜೋಡಿಸಬೇಕಾಗಿದೆ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಸಹಿತ, ಶಾಲು,ಪುಸ್ತಕ ಸ್ಮರಣಿಕೆ ನೀಡಿ ತಮ್ಮ ಕನ್ನಡ ಭಾಷಾ ಶಿಕ್ಷಕರೊಂದಿಗೆ ಅಭಿನಂದಿಸಲಾಯಿತು. ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಎಚ್. ಗಂಗಾಧರ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸುಧಾಕರ ಕರ್ಕೇರಾ ಹೆಜಮಾಡಿ, ಶಾಲಾ ಮುಖ್ಯ ಶಿಕ್ಷಕಿ ನವ್ಯಾ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಸಮಿತಿ ಪ್ರತಿನಿಧಿ ನರಸಿಂಹ ಮೂರ್ತಿ, ಕಾಪು ಘಟಕದ ಕೋಶಾಧ್ಯಕ್ಷ ವಿದ್ಯಾಧರ ಪುರಾಣಿಕ್, ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ, ಸದಸ್ಯರುಗಳಾದ ಪ್ರಜ್ಞಾ ಮಾರ್ಪಳ್ಳಿ, ಮಧುಕರ ಎಸ್ ಕಲ್ಯಾ, ರಾಕೇಶ್ ಕುಂಜೂರು, ಶಾಲಾ ಮಾಜಿ ಸಂಚಾಲಕ ಎನ್.ಡಿ. ಬಂಗೇರಾ, ಶಿಕ್ಷಕರು,ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಮಿತಿ ಪ್ರತಿನಿಧಿ ಭಾಸ್ಕರ ಆಚಾರ್ಯ ಬಿಳಿಯಾರು, ಪೋಷಕರು ಉಪಸ್ಥಿತರಿದ್ದರು.
ಕಸಾಪ ಸಹಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಚಾಲಕ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್. ಪಾಟ್ಕರ್ ಧನ್ಯವಾದವಿತ್ತರು. ತಾಲೂಕು ವ್ಯಾಪ್ತಿಯಲ್ಲಿ ಕನ್ನಡ ಭಾಷಾ ಪಾಠದಲ್ಲಿ ಪೂರ್ಣ ಅಂಕಗಳಿಸಿದ 46 ವಿದ್ಯಾರ್ಥಿಗಳು ಮತ್ತು ರ್ಯಾಂಕ್ ವಿಜೇತ ೪ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
