ವರದಿ /ಚಿತ್ರ :ರವಿರಾಜ್ ಕಾವೂರು
ಮುಂಬೈ / ಮಂಗಳೂರು : ಮುಂಬೈನ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಸಮಾಜ ಸೇವಕರಾದ ಶ್ರೀ ಕುಮಾರ್ ಎನ್. ಬಂಗೇರ ಅವರನ್ನು ಐತಿಹಾಸಿಕ ಪ್ರಸಿದ್ಧ ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರದ ನೂತನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಹಾಗೂ ಮುಖ್ಯಸ್ಥರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕ್ಷೇತ್ರ ಆಡಳಿತ ಮಂಡಳಿಯ ಪುನರ್ರಚನೆಯ ಅಂಗವಾಗಿ ಈ ಮಹತ್ವದ ನೇಮಕಾತಿ ನಡೆದಿದೆ.
ಮುಂಬೈ, ಮಂಗಳೂರು ಹಾಗೂ ದುಬೈನಲ್ಲಿ ಉದ್ಯಮ ವ್ಯಾಪಾರ ಹೊಂದಿರುವ ಶ್ರೀ ಕುಮಾರ್ ಎನ್. ಬಂಗೇರ ಅವರು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ “ತಿಯಾ ಉತ್ಸವ” ಸಂಘಟಿಸುವ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದಾರೆ. ಕೇರಳದ ಚಂದ್ರಗಿರಿ ನದಿಯಿಂದ ಹಿಡಿದು ಕರ್ನಾಟಕದ ಮುಲ್ಕಿಯವರೆಗಿನ ಕರಾವಳಿ ತೀರದ 18 ಪ್ರಮುಖ ಭಗವತಿ ಕ್ಷೇತ್ರಗಳಲ್ಲಿ ಒಂದಾದ ಈ ಶ್ರೀ ಪಾಡಂಗರ ಭಗವತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.
ನೂತನ ಪದಾಧಿಕಾರಿಗಳ ಸಮಿತಿ: ಈ ಹೊಸ ಸಮಿತಿಯಲ್ಲಿ ಅಧ್ಯಕ್ಷರಾಗಿ ಸಂತೋಷ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಹೇಮಚಂದ್ರ ಬಬ್ಬುಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ಭಾಸ್ಕರ್ ಟಿ. ಅವರು ಆಯ್ಕೆಯಾಗಿದ್ದಾರೆ.
ನೂತನ ಸಮಿತಿಯು ದೇವಸ್ಥಾನದ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳ ಸುಗಮ ನಿರ್ವಹಣೆ, ಮುಂಬರುವ ಕಲಿಯಾಟ ಮಹೋತ್ಸವ ಮತ್ತು ಸ್ಥಳೀಯ ಭಕ್ತಾದಿಗಳ ಸಹಯೋಗದೊಂದಿಗೆ ಕ್ಷೇತ್ರದ ಜೀರ್ಣೋದ್ಧಾರ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಗುರಿ ಹೊಂದಿದೆ.
