ವರದಿ /ಚಿತ್ರ: ಸೋನು ನೆಲ್ಲಿಗುಡ್ಡೆ
ಮೂಲ್ಕಿ: ಯುವವಾಹಿನಿ ಯುವ ಸಮಾಜವನ್ನು ಕಟ್ಟಿ ಬೆಳೆಸುವ ಮೂಲಕ ಸಮಾಜದ ಆಸ್ಥಿಯಾಗಿದೆ, ಯುವ ಸಮುದಾಯದ ಧ್ವನಿಯಾಗಿ ಸಧೃಢವಾಗಿ ಬೆಳೆಯಬೇಕು ಎಂದು ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಅಂಚನ್ ಬಾಳೆಹಿತ್ಲು ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಘಟಕದ ನೂತನ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು ಮಾತನಾಡಿ, ಯುವವಾಹಿನಿಯ ತತ್ವ ಆದರ್ಶಗಳು ಯುವ ಜನರನ್ನು ನಾಯಕತ್ವದ ಗುಣಗಳಿಂದ ಬೆಳೆಸುವ ಜೊತೆಗೆ ಸಮಾಜಮುಖಿಯಾಗಿದೆ ಎಂದರು.ಈ ಸಂದರ್ಭ ಸಂಸ್ಥೆಯ 24ನೇ ಅಧ್ಯಕ್ಷರಾಗಿ ಚರಿಷ್ಮಾಶ್ರೀನಿವಾಸ್ ಮತ್ತು ಅವರ ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ವಿನಯ ಕುಮಾರ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ಸೀತಾ ಗೋಪಾಲ್ ಕೋಟ್ಯಾನ್,ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರಾ ಮೂಡಬಿದ್ರಿ, ಮೂಲ್ಕಿ ಘಟಕದ ಕಾರ್ಯದರ್ಶಿ ಪ್ರೇರಣಾ ಡಿ, ಕೋಶಾಧಿಕಾರಿ ಪ್ರಥ್ವಿಕ್ ಡಿ. ಕೋಟ್ಯಾನ್, ನಿಯೋಜಿತ ಕಾರ್ಯದರ್ಶಿ ವೇದಾ ಜಯಕುಮಾರ್ ಕುಬೆವೂರು ಹಾಗೂ ವಿವಿಧ ಪದಾಧಿಕಾರಿಗಳು ಇದ್ದರು.ಸತೀಶ್ ಕಿಲ್ಪಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
