ವರದಿ ಚಿತ್ರ: ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ: ಗಾಯನ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದ್ದು, ನಿರಂತರ ಅಭ್ಯಾಸದಿಂದ ಉತ್ತಮ ಗಾಯಕರಾಗಬಹುದು, ಸಾಂಸ್ಕೃತಿಕ ಸಂಸ್ಥೆಗಳು ವೇದಿಕೆಯನ್ನು ಸೃಷ್ಟಿಸಬೇಕು ಎಂದು ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.ಅವರು ಮಂಗಳೂರಿನ ಮಧುರತರಂಗದ ಸಂಯೋಜನೆಯಲ್ಲಿ ಕಿನ್ನಗೋಳಿಯ ಯುಗಪುರುಷ ಹಾಗೂ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಜಂಟಿಯಾಗಿ ಕಿನ್ನಿಗೋಳಿಯ ಯುಗಪುರುಷ ದಲ್ಲಿ ಶ್ರೀ ಮೇಘ ರಂಜನಿ ಸಂಗೀತ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾನಂಗಿ ದೇವಸ್ಥಾನ ಉಡುಪಿಯ ಪ್ರಧಾನ ಅರ್ಚಕ ಕುತ್ಪಾಡಿ ರಾಧಾಕೃಷ್ಣ ಭಟ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಕಾರ್ಯಕ್ರಮ ದ ಸಂಯೋಜಕ ಜಗದೀಶ್ ಶಿವಪುರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಗಾಯಕ ತೋನ್ಸೆ ಪುಷ್ಕಳ್ಕುಮಾರ್ ಮಾತನಾಡಿ, ಕಲಾವಿದನ ಪ್ರದರ್ಶನ ಪ್ರತಿಭೆಯಲ್ಲಿ ಪಕ್ವತೆ ಇರಬೇಕು ಹಾಗೂ ಸಂಗೀತ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಪ್ರದರ್ಶನ ನೀಡುವ ಕಲಾವಿದರಲ್ಲಿ ಶಾಸ್ತ್ರೀಯ ಅಧ್ಯಯನ ಕಡಿಮೆ ಇದ್ದರೂ ಕೂಡ ಶೃತಿ ಲಯ ರಾಗಗಳ ಸಾಮಾನ್ಯ ಜ್ಞಾನ ಪ್ರತಿಭೆಯಲ್ಲಿ ಪಕ್ವತೆ ಇರಬೇಕು ಇದರಿಂದ ಪ್ರೇಕ್ಷಕರ ಅಭಿಮಾನ ಗಳಿಸಲು ಸಾಧ್ಯ ಎಂದರು.ಒಕ್ಕೂಟದ ಅಧ್ಯಕ್ಷ ಧನರಾಜ್, ಪ್ರಕಾಶ್, ಡಾ| ಸರಳ ರಮೇಶ್ ಕುಂದರ್, ಮಧುರತರಂಗದ ಕೋಶಾಧಿಕಾರಿ ಪಿ. ಶಿವರಾಮ್ ಇದ್ದರು.ಹಿರಿಯ ವೈದ್ಯರಾದ ಡಾ| ಹಂಸರಾಜ್ ಆಳ್ವ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಮೇಘ ರಂಜನಿ ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಮುರಳೀಧರ ಕಾಮತ್, ಸತೀಶ್ ಸುರತ್ಕಲ್, ನವಗಿರಿ ಗಣೇಶ್, ಧನರಾಜ್ ಅತ್ತಾವರ ದೀಪಕ್ ಉಳ್ಳಾಲ್, ಐವನ್ ರಿಚರ್ಡ್ ಡಿಸೋಜ, ರವೀಂದ್ರ ಪ್ರಭು, ರೇಷ್ಮಾ ಮಂಜುನಾಥ್, ವೈಷ್ಣವಿ ಭಟ್ ಕಟೀಲು, ರಮೇಶ್ ಸಾಲ್ಯಾನ್, ಶೀಲಾಪಡೀಲ್ ಮತ್ತಿತರರು ಇದ್ದರು.ವರ್ಣಶ್ರೀ ನಿರೂಪಿಸಿದರು. ನಯನ ದಿವಾಕರ್ ವಂದಿಸಿದರು.
