ವರದಿ/ ಚಿತ್ರ :ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ:ಆಷಾಢದ ತಿಂಗಳ ಕೃಷಿ ಬದುಕನ್ನು ಯುವ ಪೀಳಿಗೆಗೆ ತಲುಪಿಸುವ ಆಟಿದ ಆಚರಣೆಯ ಬಗ್ಗೆ ಸಂಘ ಸಂಸ್ಥೆಗಳು ತುಳುನಾಡಿನ ಸಂಸ್ಕೃತಿ ಸಂಸ್ಕಾರವನ್ನು ತಿಳಿಹೇಳಬೇಕು, ಹಿರಿಯರಿಂದ ತಮ್ಮ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯಬೇಕು, ಪ್ರಕೃತಿಯೊಂದಿಗೆ ಬದುಕುವ ತುಳುವರ ಜೀವನ ಶ್ರೇಷ್ಟವಾಗಿದೆ ಎಂದು ತುಳುವರ್ಲ್ಡ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು.
ಅವರು ಕಿನ್ನಿಗೋಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ನ ಸಂಯೋಜನೆಯಲ್ಲಿ ನಡೆದ “ಆಟಿದ ನೆಂಪು – ೨೦೨೬” ಕಾರ್ಯಕ್ರಮವನ್ನು ಆಟಿ ಕೆಳೆಂಜನಿಗೆ ತೆಂಗಿನಕಾಯಿ ಮತ್ತು ಅಕ್ಕಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಠ ಚಾಲನೆ ನೀಡಿ ಮಾತನಾಡಿದರು. ಹಿರಿಯ ಕೃಷಿಕ ಸತೀಶ್ ಶೆಟ್ಟಿ ಬೈಲಾಗುತ್ತು ಪಂಜ ಅವರು ಆಷಾಢ ತಿಂಗಳ ಆಚಾರ-ವಿಚಾರಗಳು ಹಾಗೂ ನಮ್ಮ ಪೂರ್ವಜರ ಜೀವನ ಕ್ರಮದ ಕುರಿತು ವಿವರಿಸಿದರು.
ಶ್ರವಣ್ ಕುಮಾರ್ ಮಂಗಳೂರು ಮಾತನಾಡಿದರು. ಲಯನ್ಸ್ ಕ್ಲಬ್ ಕದ್ರಿಹಿಲ್ಸ್ ಮಂಗಳೂರಿನ ಅಧ್ಯಕ್ಷ ಸುಧಾಕರ್ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ಲಬ್ನ ಗೌರವ ಅಧ್ಯಕ್ಷ ಲೀಲಾಧರ್ ಕಡಂಬೋಡಿ, ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್ ಇದ್ದರು.
ಸಾರ್ವಜನಿಕರಿಗೆ ಬೆಲ್ಲ, ಹುರಿಕಡಲೆ, ಕರಿಮೆಣಸಿನ ಕಷಾಯ ಹಾಗೂ ಹುರುಳಿಕಾಳಿನ ಲಡ್ಡುಗಳ ಸಹಿತ ಆಷಾಢ ತಿಂಗಳ ೪೮ ಬಗೆಯ ಖಾದ್ಯಗಳನ್ನೊಳಗೊಂಡ ಭೋಜನವನ್ನು ಉಣಬಡಿಸಲಾಯಿತು.ನರೇಂದ್ರ ಕೆರೆಕಾಡು, ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
