ವರದಿ/ ಚಿತ್ರ: ಈ ಮೀಡಿಯಾ
ಕನ್ನಡಉಡುಪಿ : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಗೌರವ ಪುರಸ್ಕಾರವನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆ ಮಳಿಗೆಯಲ್ಲಿ ಬುಧವಾರ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳು, ಯುವಜನತೆ ಸಮಾಜಮುಖಿಯಾಗಿ ಪರಿಸರ ಕಾಳಜಿ ಹೊಂದುವುದು ಅಗತ್ಯ ಮತ್ತು ಅನಿವಾರ್ಯ. ಮಕ್ಕಳಿಗೆ ಉಪದೇಶದ ಬದಲು ಯಾವುದೇ ಉತ್ತಮ ಕೆಲಸವನ್ನು ಮಾಡಿ ತೋರಿಸಬೇಕು. ಮನೆಗಳಲ್ಲಿ ಗ್ರಂಥಾಲಯ ರೂಪುಗೊಂಡರೆ ಬೌದ್ಧಿಕ ಶ್ರೀಮಂತಿಕೆ ಹೆಚ್ಚಳ ಸಾಧ್ಯ ಎಂದು ಹೇಳಿದರು.
ಪಾಂಡೇಶ್ವರ ಗುರುಕುಲದ ಡಾ.ವಿಜಯ ಕುಮಾರ್ ಮಂಜರ್ ಅಧ್ಯಕ್ಷತೆ ವಹಿಸಿ, ಸಂಗೀತ, ಕಲೆ, ಸಾಹಿತ್ಯದಿಂದ ಜೀವನ ಪರಿಪೂರ್ಣ. ಇವು ಮೂರೂ ಇಲ್ಲದವ ಬಾಲ, ಕೊಂಬಿಲ್ಲದ, ಆದರೆ ಹುಲ್ಲೂ ತಿನ್ನದ ಪಶುವಿಗೆ ಸಮಾನ. ವ್ಯಕ್ತಿಯ ದೇಹ, ಮನಸ್ಸಿನ ಆರೋಗ್ಯ ಕಾಪಾಡುವ ವೈದ್ಯ, ವ್ಯಕ್ತಿ/ಸಂಸ್ಥೆಯ ಆರ್ಥಿಕ ಕಾಪಾಡುವ ಲೆಕ್ಕ ಪರಿಶೋಧಕ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ ಎಂದರು.
ಮಲಬಾರ್ ವಿಶ್ವ ವೈದ್ಯ ಪುರಸ್ಕಾರ ಡಾ. ಎ. ರಾಮಚಂದ್ರ ಬಾಯರಿ, ಡಾ. ಕೆ. ಸತೀಶ್ ಕಾಮತ್, ಡಾ. ಇಂದಿರಾ ವಿ. ಶಾನುಭೋಗ್. ಮಲಬಾರ್ ವಿಶ್ವ ಲೆಕ್ಕ ಪರಿಶೋಧಕ ಪುರಸ್ಕಾರ ಸಿಎ ದೇವ್ ಆನಂದ್, ಸಿಎ ಗಣೇಶ್ ಎರ್ಮಾಳ್ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ “ಸುವರ್ಣ ಟಿವಿ” ವಾಹಿನಿಯ ಶಶಿಧರ ಮಾಸ್ತಿಬೈಲು, “ಕರ್ನಾಟಕ ಮಲ್ಲ”, “ಇ ಮೀಡಿಯ ಕನ್ನಡ ದ ಬಾಲಕೃಷ್ಣಪೂಜಾರಿ ಉಚ್ಚಿಲ ಮತ್ತು “ಕನ್ನಡ ಪ್ರಭ” ಪತ್ರಿಕೆಯ ರಾಮ್ ಅಜೆಕಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಯು. ವಿಶ್ವನಾಥ್ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ. ಮಾತನಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವ್ಯವಸ್ಥಾಪಕ ವಿಜಯ್ ಕುಮಾರ್ ಡಿ. ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಡಾ. ಭಾರ್ಗವಿ ಐತಾಳ್, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರಂಜನಿ ವಸಂತ್ ವಾಚಿಸಿದರು. ವಿದ್ಯಾ ಶ್ಯಾಮ ಸುಂದರ್ ಪ್ರಾರ್ಥಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ಸ್ವಾಗತಿಸಿದರು. ವಿಶ್ಲೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಪಣಿಯಾಡಿ ವಂದಿಸಿದರು.
