ಮೂಲ್ಕಿ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೂಲ್ಕಿಯಿಂದ ಸುರತ್ಕಲ್ವರೆಗೆ ಪ್ರಮುಖ ಜಂಕ್ಷನ್ನಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ದೇವಳದ ಗೋಪುರವನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ದೇವಳದ ಸ್ವಾಗತ ಗೋಪುರ, ಕಾಣಿಕೆ ಡಬ್ಬಿ ಮತ್ತು ಸ್ಮಾರಕಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ದೇವಳಕ್ಕೆ ಪರಿಹಾರ ಧನ ನೀಡಲಾಗಿತ್ತು.

೧೯೯೯ರಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತವರ ಸಹೋದರ ತಮ್ಮ ಹೆತ್ತವರ ನೆನಪಿಗಾಗಿ ದೇವಳದ ಪೂರ್ವ ದಿಕ್ಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸ್ವಾಗತ ಗೋಪುರ ನಿರ್ಮಿಸಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ನಿರ್ಮಾಣವಾಗಲಿರುವುದರಿಂದ ಹೆದ್ದಾರಿ ಇಲಾಖೆಯು ತೆರವುಗೊಳಿಸಲು ನಿರ್ಧರಿಸಿತ್ತು.
ಮೂಲ್ಕಿಯ ಸಿವಿಲ್ ಇಂಜಿನಿಯರ್ ಜೀವನ್ ಶೆಟ್ಟಿ ಅವರು ಉತ್ತರ ಭಾರತದ ಇಂಜಿನಿಯರ್ಗಳನ್ನು ಕರೆಸಿ ಸ್ವಾಗತ ಗೋಪುರವನ್ನು ಇದ್ದಂತೆಯೇ ತೆಗೆದು ಬೇರೆ ಕಡೆ ಇರಿಸಿ ಮತ್ತೆ ಪುನಾಸ್ಥಾಪಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಇದಕ್ಕೆ ಸುಮಾರು ೧೦ ಲಕ್ಷ ರೂ. ವೆಚ್ಚ ತಗುಲಲಿದ್ದು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸ್ವಾಗತ ಗೋಪುರದ ತುದಿಯವರೆಗೆ ಕಲ್ಲುಗಳನ್ನು ಕಟ್ಟಲಾಗಿದ್ದು. ಸ್ವಾಗತ ಗೋಪುರ ತೆರವುಗೊಳಿಸುವ ಮೊದಲು ಕ್ರೇನ್ ಮೂಲಕ ಹೆದ್ದಾರಿ ಬದಿಯಲ್ಲಿದ್ದ ದೇವಳದ ಕಾಣಿಕೆ ಹುಂಡಿಯನ್ನು ಯಾವುದೇ ಹಾನಿಯಾಗದಂತೆ ಇದ್ದಂತೆಯೇ ಸ್ಥಳಾಂತರಿಸಲಾಗಿದೆ.
ಆಗಮಿಸುವ ವಾಹನಗಳಿಗೆ ಸ್ವಾಗತ ಗೋಪುರದ ಬದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದೆ ಹಾಗೂ ಮೂಲ್ಕಿಯ ಮುಖ್ಯ ಜಂಕ್ಷನ್ನಿಂದ ಮೀನು ಮಾರುಕಟ್ಟೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಹೆದ್ದಾರಿಯವರು ರಸ್ತೆಯ ಬದಿಯಲ್ಲಿದ್ದ ಸ್ಮಾರಕಗಳನ್ನು ತೆರವುಗೊಳಿಸಿದ್ದಾರೆ. ಸ್ವಾಗತ ಗೋಪುರದ ಸ್ಥಳಾಂತರದ ಪ್ರಕ್ರಿಯೆ ಸುಮಾರು ೧೫ ದಿನಗಳಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಕಡೆಯಲ್ಲಿ ಯಾವುದೇ ಕಟ್ಟಡವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಆದರೆ ಇಲ್ಲಿ ನೂತನ ತಂತ್ರಜ್ಞಾನ ಮೂಲಕ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ.

ಸಾಮಾನ್ಯವಾಗಿ ಹಳೇಯದ್ದನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡುವ ಸಂಪ್ರದಾಯ ಎಲ್ಲಾ ಕಡೆಯಲ್ಲಿದೆ ಆದರೆ ಸುಂದರವಾದ ಅಷ್ಟೇ ಸಧೃಢವಾದ ಗೋಪುರ ಮರಳಿ ನಿರ್ಮಿಸಲು ಕೋಟ್ಯಾಂತರ ಖರ್ಚು ಇರುವುದರಿಂದ ಇಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಸ್ಥಳಾಂತರ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಹಿಂದೆ ಇದೇ ತಂತ್ರಜ್ಞಾನದಿಂದ ಕಟ್ಟಡದ ಸ್ಥಳಾಂತರ ಮನೆಗಳ ಸ್ಥಳಾಂತರ ಕಾರ್ಯ ಹಲವು ಪ್ರದೇಶಗಳಲ್ಲಿ ನಡೆದಿದೆ. ಆದರೆ ಸ್ವಾಗತ ಗೋಪುರ ಸ್ಥಳಾಂತರ ಕಾರ್ಯ ಪ್ರಥಮವಾಗಿ ನಡೆಯುತ್ತಿದೆ. ಹರಿಯಾಣ ಮೂಲದ ತಂತ್ರಜ್ಞರು ಈ ಕೆಲಸವನ್ನು ನಿರ್ವಹಿಸಲಿದ್ದಾರೆ.
/= ಜೀವನ್ ಕೆ. ಶೆಟ್ಟಿ
ಸ್ಥಾಪಕಾಧ್ಯಕ್ಷರು ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ಮೂಲ್ಕಿ

ದಾನಿಗಳಿಂದಲೇ ಸ್ಥಳಾಂತರ ಪ್ರಕ್ರಿಯೆ..
ಹೆದ್ದಾರಿ ಇಲಾಖೆಯವರು ಸ್ವಾಗತ ಗೋಪುರವನ್ನು ಕೆಡವಲು ಸಮಯ ನೀಡಿದ್ದು ಈ ಮಧ್ಯೆ ಸ್ವಾಗತ ಗೋಪುರದ ದಾನಿ ಐಕಳ ಹರೀಶ್ವವ ಶೆಟ್ಟಿ ಸ್ವಾಗತ ಗೋಪುರವನ್ನು ಉಳಿಸುವ ನಿಟ್ಟಿನದಲ್ಲಿ ಸ್ಥಳಾಂತರಿಸುವ ಬಗ್ಗೆ ವಿಚಾರಿಸಿ, ಆಕ್ಷೇಪಣೆ ಇದೆಯಾ ಎಂದು ಕೇಳಿದ್ದರು. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸ್ಥಳಾಂತರಿಸುವುದಕ್ಕೆ ಆಕ್ಷೇಪವಿವೆಂದು ತಿಳಿಸಿದ್ದೇವೆ. ದಾನಿಗಳು ಸ್ಥಳಾಂತರದ ಜವಾಬ್ದಾರಿಯನ್ನು ವಹಿಸಿದ್ದಾರೆ.
