.ಬೆಂಗಳೂರು: ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆಕೆ ಮುಂದುವರೆಯಲಿದೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಹೀಗಾಗಿ ಮುಂದಿನ ಏಳು ದಿನ ಕಾಲ ಭಾರೀ ಮಳೆ ಬರುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ನೇರ ಪರಿಣಾಮ ಕರಾವಳಿ ತೀರದ ಮೇಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿರುಗಾಳಿಯ ವೇಗ ತೀವ್ರವಾಗಿರುವುದರಿಂದ ಕಡಲು ರೊಚ್ಚಿಗೆದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ರವಾನಿಸಿವೆ. ಕರಾವಳಿ ಭಾಗದಲ್ಲಿ ಮೇ 31ರವರೆಗೆ ಹಳದಿ ಎಚ್ಚರಿಕೆ (Yellow Alert) ಜಾರಿಯಲ್ಲಿದ್ದು, ನಿರಂತರ ಮಳೆ ಹಾಗೂ ಬಲವಾದ ಸಮುದ್ರ ಗಾಳಿ ಬೀಸಲಿದೆ.ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಬೆಳಗಿನಿಂದಲೇ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆ ವೇಳೆಗೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ.

ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸದ್ಯ ಗರಿಷ್ಠ ತಾಪಮಾನ 32°C ಆಸುಪಾಸಿನಲ್ಲಿದೆ. ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ (ಮೇ 29 ರಿಂದ ಮೇ 31) ಚಂಡಮಾರುತದ ತೀವ್ರತೆಯು ಸ್ವಲ್ಪ ತಗ್ಗಲಿದ್ದು, ಹಳದಿ ಅಲರ್ಟ್ಗೆ ಇಳಿಕೆಯಾಗಲಿದೆ. ಶನಿವಾರ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಭಾನುವಾರ ಮತ್ತು ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಲಿದೆ. ಇದರಿಂದಾಗಿ ತಾಪಮಾನವು 31°C ಗೆ ಇಳಿಕೆಯಾಗುವ ಮೂಲಕ ನಗರದಲ್ಲಿ ತಂಪಾದ ವಾತಾವರಣವಿರಲಿದೆ.

