ವರದಿ/ ಚಿತ್ರ: ಈ ಮೀಡಿಯಾ
ಎಲ್ಲೂರು: ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಳಗಿನ ಮನೆಯ ಯುವ ರೈತ ಹರೀಶ್ ಪೂಜಾರಿ ಮತ್ತು ಕಿಶೋರ್ ಪೂಜಾರಿ ಸಹೋದರರು ಸಾಂಪ್ರದಾಯಿಕ ನಾಟಿ ಕಾರ್ಯವನ್ನು ಮುಂದುವರಿಸುತ್ತಿದ್ದು ಸ್ಥಳೀಯ ಎಲ್ಲಾ ರೈತರಿಗೂ ಮಾದರಿಯಾಗಿದ್ದಾರೆ.
ತಮ್ಮ ಹಿರಿಯರಿಂದ ಬಂದ ಸುಮಾರು 10 ಎಕರೆ ಕೃಷಿ ಭೂಮಿಯನ್ನು ಇವರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಾಟಿ ಮಾಡುತ್ತಿದ್ದು, ಕೃಷಿ ಕಾರ್ಮಿಕರ ಅಭಾವವಿದ್ದರೂ ಹೊರ ಜಿಲ್ಲೆಗಳಿಂದ ಕೃಷಿ ಕಾರ್ಮಿಕರನ್ನು ತರಿಸಿ ನಾಟಿ ಮಾಡುತ್ತಿರುವ ಇವರು ನೆರೆಕೆರೆಯ ರೈತರಿಗೂ ನಾಟಿ ಮಾಡಲು ಸಹಕರಿಸುತ್ತಿದ್ದಾರೆ.
ಸರಕಾರದಿಂದ ಸರಿಯಾದ ಸಮಯಕ್ಕೆ ರಸಗೊಬ್ಬರಗಳು ಸಿಗುತ್ತಿಲ್ಲ ಎಂಬ ನೋವನ್ನು ತೋಡಿಕೊಂಡ ಇವರು, ಸರಕಾರವುರೈತರಿಗೆ ಸಂಪೂರ್ಣ ಸವಲತ್ತನ್ನು ಸಕಾಲದಲ್ಲಿ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಇವರ ಸಾಂಪ್ರದಾಯಿಕ ನಾಟಿ ಪದ್ಧತಿಯನ್ನು ವೀಕ್ಷಿಸಿದ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ಉದ್ಯಾವರ, ಕಾಪು ಬ್ಲಾಕ್ ದಕ್ಷಿಣ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷರಾದ ಪಾಂಡು ಶೆಟ್ಟಿ ಎಲ್ಲೂರು, ಸ್ಥಳೀಯ ರೈತರಾದ ಶಶಿ ಶೆಟ್ಟಿ ಬರ್ಪಾಣಿ, ಮಿತ್ರ ಅಂಚನ್ ಗುಂಡಿ ತೋಟ, ಶಂಕರ್ ಪೂಜಾರಿ ಮುಂತಾದವರು ಹರೀಶ್ ಪೂಜಾರಿ ಹಾಗೂ ಕಿಶೋರ್ ಪೂಜಾರಿ ಸಹೋದರ ಕೃಷಿ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
