ವರದಿ / ಚಿತ್ರ: ಬಾಲಕೃಷ್ಣ ಉಚ್ಚಿಲ
ಉಚ್ಚಿಲ : ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ಬಗೆಗಿನ ಸತ್ಯವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ 2 ದಿನಗಳ ಬಿಜೆಪಿ ಉಡುಪಿ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.ಎಲ್ಲಾ
ಸಂಕಷ್ಟಗಳ ಮಧ್ಯೆಯೂ ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ಜಿಡಿಪಿ ಅತೀ ವೇಗದಲ್ಲಿ ಸುಧಾರಿಸುತ್ತಿರುವುದನ್ನು ಜನರಿಗೆ ಮನವರಿಕೆ ಮಾಡುವ ಅಗತ್ಯ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ 2024ರಲ್ಲಿ ಭಾರತವನ್ನು ಸಂಪೂರ್ಣ ವಿಕಸಿತ ದೇಶವನ್ನಾಗಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ 3 ಟಾಸ್ಕ್ಗಳನ್ನು ಪಕ್ಷದ ಕಾರ್ಯಕರ್ತರಿಗೆ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ದೇಶದ ಹೊರಗಿನಿಂದ ಹಣ ಪೂರೈಕೆ ಮಾಡಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಕ್ರಮೇಣ ಈ ಸುಳ್ಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿತ್ತಸಚಿವೆ, ಬಿಜೆಪಿ ಕಾರ್ಯಕರ್ತರು ಈ ಸುದ್ಧಿಗಳ ಅಧಿಕೃತತೆಯನ್ನು ಪರೀಕ್ಷಿಸಿ, ಸುಳ್ಳು ಸುದ್ದಿ ಎಂದು ಗೊತ್ತಾದಾಗ ಸುಮ್ಮನಿರಬೇಡಿ. ಆದರೇ ಜಗಳವಾಡಬೇಡಿ. ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಜನರಿಗೆ ಮುಂದಿಡಿ ಎಂದು ಕರೆ ನೀಡಿದರು. ಬಿಜೆಪಿ
ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಕ್ಕೆ ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತಿದೆ. ಬಿಜೆಪಿ ಕಾರ್ಯಕರ್ತರು ಇದನ್ನೆಲ್ಲಾ ಎದುರಿಸಿ ನಿಲ್ಲುವುದಕ್ಕೆ ಸದಾ ಸಿದ್ದರಿರಬೇಕು ಎಂದರು. ಮಧ್ಯಪ್ರಾಚ್ಯ ಚಿಕ್ಕಟ್ಟಿನ ಮಧ್ಯೆಯೂ ಭಾರತದ ಜಿಡಿಪಿ ಶೇ 7.7ರ ದರದಲ್ಲಿ ಹೆಚ್ಚುತ್ತಿದೆ. ದೇಶದ ಆರ್ಥಿಕತೆ ಸಬಲವಾಗಿದೆ ಎಂದು ಸ್ವತಃ ವಿಶ್ವ ಬ್ಯಾಂಕ್ ಹೇಳಿದೆ. ವಿದೇಶಿ ಮಾರುಕಟ್ಟೆಯೂ ಅತ್ಯುತ್ತಮವಾಗಿದೆ ಎಂದು ಎಲ್ಲಾ ಸೂಚಕಗಳು ತಿಳಿಸುತ್ತಿವೆ. ದೇಶದ ಕೈಗಾರಿಕಾ ಹೂಡಿಕೆಯೂ ಶೇ 60ರಷ್ಟು ಹೆಚ್ಚಾಗಿದೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪಲು ತಯಾರಿಲ್ಲ. ದೇಶದ ಜಿಡಿಪಿ ಹೆಚ್ಚುತ್ತಿದೆ ಎಂದರೆ ದೇಶದೊಳಗಿನ ಕೈಗಾರಿಕಾ, ಕೃಷಿ, ಬ್ಯಾಂಕಿಂಗ್, ಸೇವಾ ಸೇರಿ ಎಲ್ಲಾ ವಲಯಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದೇ ಅರ್ಥ. ಆದ್ದರಿಂದ ಕಾರ್ಯಕರ್ತರು ಇದನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿ. ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಕಿರಣ್ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಡಾ. ಧನಂಜಯ ಸರ್ಜಿ,ವಿಕಾಸ್ ಪುತ್ತೂರು, ಕೆ. ಉದಯಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಉಪಸ್ಥಿತರಿದ್ದರು. ಶ್ರೀಕಾಂತ ನಾಯಕ್ ಸ್ವಾಗತಿಸಿದರು. ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು. ಕೆ. ಬಿ.ಶೆಟ್ಟಿ ವಂದಿಸಿದರು.
