ಬಂಟ್ವಾಳ: ಒಂದು ಪ್ರದೇಶದಸಾಂಸ್ಕೃತಿಕ ಕುರುಹುಗಳಾದ ಕೋಟೆ ಕೊತ್ತಲಗಳು, ಶಾಸನಗಳು, ವಸ್ತು ಪರಿಕರಗಳು ದೇಶದ ಬೆಲೆಕಟ್ಟಲಾಗದ ಆಸ್ತಿ. ಇವುಗಳು ನಮ್ಮ ನೆಲದ ಚರಿತ್ರೆಯನ್ನು ರಚಿಸಲು ಮತ್ತು ನಮ್ಮ ಪೂರ್ವಜರ ಬದುಕು, ಬವಣೆಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ ಹೇಳಿದರು.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿ ಸಂಗ್ರಹಿಸಿಟ್ಟಿರುವ ತುಳು ಬದುಕಿನ ಪ್ರಾಚೀನ ವಸ್ತುಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದಆಯಾ ಜಲ್ಲಾಧಿಕಾರಿಯವರು, ದೈವ, ದೇವಸ್ಥಾನಗಳ ಸಾಂಸ್ಕೃತಿಕ ಕುರುಹುಗಳು, ಶಾಸನ ಇತ್ಯಾದಿಗಳನ್ನು ಅಲ್ಲಲ್ಲಿಯೇ ಜತನದಿಂದ ಕಾಪಿಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಈ ದಿಸೆಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ನಿರಂತರತೆ, ಬದ್ಧತೆ ಮತ್ತು ಕೆಲಸ, ಕಾರ್ಯವನ್ನು ಶ್ಲಾಘಿಸಿದ ಜಿಲ್ಲಾಧಿಕಾರಿ ಸ್ವರೂಪ್ ಅವರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಇಂತಹ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ ಎಂದರು.ಕೇಂದ್ರದ ಸ್ಥಾಪಕಾಧ್ಯಕ್ಷರಾದ ಪೂಜಾರಿ ಡಾ.ತುಕಾರಾಮ್ ಅವರು ಅಬ್ಬಕ್ಕ ಕಲಾ గ్యాలరి ಹಾಗೂ ಮ್ಯೂಸಿಯಮ್ ನ ಕುರಿತು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್ ಆರ್ ರಶ್ಮಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅರುಣ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಹಾಗೂತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.
