ಮಂಗಳೂರು : ಮುಂಬಯಿನಿಂದ ಪತ್ನಿ,ಮಗನ ಜತೆ ಕಾರಿನಲ್ಲಿ ಬರುತ್ತಿದ್ದ ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಹಣವನ್ನು ದೋಚಿದ ಘಟನೆ ಪಣಂಬೂರು ಬಳಿಯ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಘಟಿಸಿದೆ.
ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ತನ್ನ ಪತ್ನಿ ಹಾಗೂ ಪುತ್ರನ ಜೊತೆಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮುಂಬೈನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು. ಬೆಳಿಗ್ಗಿನ ಜಾವ 3ಗಂಟೆಯ ಸುಮಾರಿಗೆ ಬೈಕಂಪಾಡಿ ಬಳಿ ಎರಡು ಇನ್ನೋವಾ ಕಾರುಗಳು ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ಸುಮಾರು 7 ರಿಂದ 8 ಮಂದಿ ಅಪರಿಚಿತರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.
ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗನ ಸಮೇತ ಕಾರನ್ನು ಒಯ್ದಿದ್ದಾರೆ. ಬಳಿಕ ಕುಳೂರು ಬಳಿ ಪತ್ನಿ, ಮಗನನ್ನು ಕೆಳಗಿಳಿಸಿ, ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ವಿಕಾಸ್ ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದು, ಮುಂಬಯಿನ ಸಾಂಗ್ಲಿಯಲ್ಲಿ ವಿವಾಹಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು.
ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.180 ಗ್ರಾಂ ಚಿನ್ನ ಮತ್ತು ನಗದು ಸಹಿತ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತು ಹೊತ್ತೊಯ್ದಿದ್ದಾರೆ ಎಂದು ವಿಕಾಸ್ ದೂರು ನೀಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
