ವರದಿ/ ಚಿತ್ರ:ಈ ಮೀಡಿಯಾ
ಕಟಪಾಡಿ: ಕಟಪಾಡಿ ಅಚ್ಚಡ ಸರಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಿಸಲಾದ LKG ತರಗತಿಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಂಗಾರದ ತುಂಡಿನಂತಿರುವ ಪುಟ್ಟ ಮಕ್ಕಳಿಗೆ ವಿದ್ಯೆ, ಬುದ್ದಿ, ಸಂಸ್ಕಾರ ಹಾಗೂ ಆಟ-ಪಾಠಗಳ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಪವಿತ್ರ ಕಾರ್ಯವನ್ನು ಶಾಲೆಗಳು ಮತ್ತು ಶಿಕ್ಷಕರು ಮಾಡುತ್ತಾರೆ. ಶಿಕ್ಷಕರು ಜವಾಬ್ದಾರಿಯಿಂದ ಸೇವೆ ಸಲ್ಲಿಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಬೇಕು. ಶಾಲೆಗಳು ದೇವಸ್ಥಾನಕ್ಕೆಸಮಾನವಾಗಿದ್ದು, ನಾನೂ ಇದೇ ರೀತಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಈ ಸ್ಥಾನಕ್ಕೆ ಬಂದಿದ್ದೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಟಪಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಶೋಕ್, ಸುಮಾರು ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ಉಳಿಸಿ-ಬೆಳೆಸುವುದು ಹಾಗೂ ಮುಂದಿನ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಡಗು ಮನೆಶ್ರೀನಿವಾಸ ಶೆಟ್ಟಿ, ಅವಿನಾಶ್ ಆಚಾರ್ಯ, ಶುಭಾಷ್ ಬಲ್ಲಾಳ್, ಪ್ರವೀಣ್ ಪೂಜಾರಿ, ಶಿವಣ್ಣ ಶೆಟ್ಟಿ, ಜಗದೀಶ ಆಚಾರ್ಯ, ಶ್ರೀಮತಿ ಶ್ಯಾಮಲಾ ಮೇಡಂ ಹಾಗೂ ಶ್ರೀಮತಿ ಪೂರ್ಣಿಮಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ LKG ತರಗತಿಯ ಆರಂಭಕ್ಕೆ ಶುಭಹಾರೈಸಿದರು.
